
ಮಂಗಳೂರು : ಮಂಗಳೂರಿನ ತಣ್ಣಿರುಬಾವಿ ಬೀಚ್ ನಲ್ಲಿ ಯುವತಿಯೊಬ್ಬರ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಮಂದಿ ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು 20 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 74 ಸಾವಿರ ರೂಪಾಯಿ ದಂಡ ವಿಧಿಸಿದೆ.
ಪ್ರಜ್ವಲ್ (33), ಆದಿತ್ಯ ಸಾಲ್ಯಾನ್ (28), ಅರುಣ್ ಅಮೀನ್ (34) ಹಾಗೂ ಅಬ್ದುಲ್ ರಿಯಾಜ್ (40) ಶಿಕ್ಷೆಗೊಳಗಾದ ಅಪರಾಧಿಗಳು.
2018ರ ನವೆಂಬರ್ 18ರಂದು ಮಧ್ಯಾಹ್ನ ಸುಮಾರು 12;15ರ ವೇಳೆ ಮಂಗಳೂರಿನ ತಣ್ಣೀರುಬಾವಿ ಬಳಿಯ ತೋಟ ಬೆಂಗ್ರೆ ಬೀಚ್ ನಲ್ಲಿ ತನ್ನ ಗೆಳೆಯನ ಜೊತೆ ಬಂದಿದ್ದ ಯುವತಿಯ ಮೇಲೆ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಇದೇ ವೇಳೆ ಯುವಕನಿಗೆ ಹಲ್ಲೆ ನಡೆಸಿರುವ ಅರೋಪಿಗಳು ಘಟನೆ ನಡೆದ ಬಳಿಕ ಇಬ್ಬರಿಗೂ ಈ ಪ್ರಕರಣದ ಬಗ್ಗೆ ಯಾರಿಗೂ ತಿಳಿಸದಂತೆ ಹೆದರಿಸಿ ಪ್ರಾಣ ಬೆದರಿಕೆ ಹಾಕಿದ್ದರು. ಜೊತೆಗೆ ಆರೋಪಿಗಳು ಸಂತೃಸ್ತೆಯ ಮೊಬೈಲ್ ಅನ್ನು ಕೂಡ ವಶಪಡಿಸಿಕೊಂಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಅಂದಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಕಲಾವತಿ ಕೆ. ಮತ್ತು ಸಹಾಯಕ ಪೊಲೀಸ್ ಅಯುಕ್ತರಾದ ಮಂಜುನಾಥ ಶೆಟ್ಟಿ ತನಿಖೆ ನಡೆಸಿದ್ದರು. ಬಳಿಕ ಅಂದಿನ ಸಹಾಯಕ ಪೊಲೀಸ್ ಅಯುಕ್ತರಾದ ಶ್ರೀನಿವಾಸ ಗೌಡ ಆರ್. ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದಲ್ಲಿ ಒಟ್ಟು 65 ಸಾಕ್ಷಿದಾರರ ಪೈಕಿ 40 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದ್ದು, ತಾರೀಕು 09-01-2020 ರಂದು ಆರಂಭವಾದ ವಿಚಾರಣೆಯು ತಾರೀಕು 09-04-2024ರಂದು ಪೂರ್ಣಗೊಂಡಿರುತ್ತದೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕರವರು ವಾದ ಮಂಡಿಸಿರುತ್ತಾರೆ. ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಜಗದೀಶ ವಿ.ಎನ್. ಆರೋಪಿತರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ.
ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ, ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಪ್ರಜ್ವಲ್ (33), ಅರುಣ್ ಅಮೀನ್ (34), ಆದಿತ್ಯ ಸಾಲ್ಯಾನ್ (28) ಹಾಗೂ ಅಬ್ದುಲ್ ರಿಯಾಜ್ (40) ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ, ಪ್ರತಿಯೊಬ್ಬರಿಗೂ 20 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 74 ಸಾವಿರ ರೂಪಾಯಿ ದಂಡ ವಿಧಿಸಿದೆ.
ಈ ದಂಡದ ಮೊತ್ತದಲ್ಲಿ 60 ಸಾವಿರ ರೂಪಾಯಿಯನ್ನು ಸಂತ್ರಸ್ತೆಗೆ ನೀಡಲು ಹಾಗೂ ಉಳಿದ 14 ಸಾವಿರ ರೂಪಾಯಿಯನ್ನು ಸರಕಾರಕ್ಕೆ ಪಾವತಿಸಲು ಅದೇಶಿಸಕಾಗಿದೆ. ಜೊತೆಗೆ ಸಂತ್ರಸ್ತೆಯ ಮೊಬೈಲ್ ಅನ್ನು ಹಿಂತಿರುಗಿಸುವಂತೆ ಮತ್ತು ಆರೋಪಿಗಳ ಮೊಬೈಲ್ ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಲಯವು ಅದೇಶ ಹೊರಡಿಸಿದೆ.
_Sathish Kapikad