
ಮಂಗಳೂರು : ಆಗಸ್ಟ್ 17 ಸೋಮವಾರದಂದು ನಾಗರ ಪಂಚಮಿ ಹಬ್ಬವಿದ್ದು, ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಆದ್ದರಿಂದ ಹಿಂದೂ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಕೊಂಡು ಅಂದು ಸ್ಥಳೀಯ ರಜೆ ಘೋಷಣೆ ಮಾಡುವಂತೆ ಶಾಸಕ ವೇದವ್ಯಾಸ ಕಾಮತ್ ರವರು ದ.ಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ದೈವ ದೇವರುಗಳ ತುಳುನಾಡಿನಲ್ಲಿ ನಾಗರಾಧನೆಗೆ ಪ್ರಮುಖ ಸ್ಥಾನವಿದೆ. ಇಲ್ಲಿನ ಪ್ರತೀ ಕುಟುಂಬಕ್ಕೂ ನಾಗನ ಮೂಲಸ್ಥಾನವಿದ್ದು, ವರ್ಷಕ್ಕೊಮ್ಮೆ ಕುಟುಂಬ ಸಮೇತರಾಗಿ ಅಲ್ಲಿ ಹೋಗಿ ನಾಗನಿಗೆ ವಿಶೇಷ ಪೂಜೆ ಸಲ್ಲಿಸುವುದು ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಇಂತಹ ಸಂದರ್ಭದಲ್ಲಿ ರಜೆ ನೀಡದಿದ್ದರೆ ಕುಟುಂಬಗಳ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗುತ್ತದೆ.
ಹಿಂದೂಗಳು ಮಾತ್ರವಲ್ಲದೇ ಜೈನರು ಸಹ ಆಚರಿಸುವ ನಾಗರ ಪಂಚಮಿ ಸಾಂಪ್ರದಾಯಿಕ ಹಬ್ಬವಾಗಿದ್ದು, ಉಭಯ ಜಿಲ್ಲೆಗಳಲ್ಲಿ ನಾಗರ ಪಂಚಮಿ ಯಂದು ರಜೆ ಘೋಷಿಸುವಂತೆ ಕ್ರಮವಹಿಸಲು ಶಾಸಕರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದರು.
_Sathish Kapikad


