ಮಂಗಳೂರು, ಜು. 29: ಐತಿಹಾಸಿಕ ಪ್ರಸಿದ್ಧಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗುರುಪೂರ್ಣಿಮೆಯನ್ನು ಬುಧವಾರ ಭಕ್ತಿ-ಶ್ರದ್ಧೆಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಗುರುಪೂರ್ಣಿಮೆಯ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು, ರುದ್ರಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಧ್ಯಾಹ್ನ ಶ್ರೀ ಮತ್ಸೇಂದ್ರನಾಥ, ಶ್ರೀ ಗೋರಕ್ಷನಾಥ, ಶ್ರೀ ಚೌರಂಗಿನಾಥ, ತ್ರಿಲೋಕೇಶ್ವರ, ವಿಷ್ಣು ದೇವರು ಹಾಗೂ ವ್ಯಾಸಮುನಿಗಳಿಗೆ ವಿಶೇಷ ಗುರುಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ವೈದಿಕ ವಿಧಿವಿಧಾನಗಳೊಂದಿಗೆ ಏಕಾದಶ ರುದ್ರಾಭಿಷೇಕ ನೆರವೇರಿತು.

ಗುರುಪೂರ್ಣಿಮೆಯ ಪವಿತ್ರ ಪರ್ವದ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ದೇವರ ಕೃಪಾಶೀರ್ವಾದ ಪಡೆದರು. ದೇವಸ್ಥಾನದ ಆವರಣದಲ್ಲಿ ದಿನವಿಡೀ ಭಕ್ತರ ದಟ್ಟಣೆ ಕಂಡುಬಂತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಿ, ಗುರುಪರಂಪರೆಯ ಸ್ಮರಣಾರ್ಥ ಹಾಗೂ ವಿಶ್ವಶಾಂತಿ, ಲೋಕಕಲ್ಯಾಣ ಮತ್ತು ಸರ್ವರ ಸುಖ-ಸಮೃದ್ಧಿಗಾಗಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿತು.

_Sathish Kapikad

Share.
Leave A Reply

Exit mobile version