
ಮಂಗಳೂರು, ಫೆಬ್ರವರಿ,04: “ಕೆನರಾ ಹೈಸ್ಕೂಲ್, ಅಸೋಸಿಯೇಷನ್” ಎಂಬ ಪ್ರಸಿದ್ಧ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಬದ್ಧವಾದ ಸಂಸ್ಥೆಯಿಂದ 1973ರಲ್ಲಿ ಸ್ಥಾಪಿತವಾದ “ಕೆನರಾ ಕಾಲೇಜು” , ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಟ್ಟಿದ್ದು ಕಳೆದ ಐದು ದಶಕಗಳಲ್ಲಿ ಮಂಗಳೂರು ನಗರದಲ್ಲಿನ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷ ಡಿ. ವಾಸುದೇವ ಕಾಮತ್ ತಿಳಿಸಿದರು.
ನಗರದಲ್ಲಿಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆನರಾ ಕಾಲೇಜು ರಾಷ್ಟ್ರೀಯA ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ನಿಂದ 3.21 ಸಿ.ಜಿ.ಪಿ.ಎ, ‘ಎ’ ಶ್ರೇಣಿ ಮಾನ್ಯತೆ ಪಡೆದಿದ್ದು ಇದು ಇಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಶ್ರೇಷ್ಠತೆ ಹಾಗೂ ಬದ್ಧತೆಯನ್ನು ಪ್ರತಿಬಿಂಬಿಸುವುದು. ಈ ಸಂಸ್ಥೆ 1569 ವಿದ್ಯಾರ್ಥಿಗಳು ಮತ್ತು 85 ಅರ್ಹ ಉಪನ್ಯಾಸಕ ಹಾಗೂ ಸಿಬ್ಬಂದಿಯೊಂದಿಗೆ ಶಿಸ್ತು, ಹೊಸತನ ಮತ್ತು ಸಮಗ್ರ ವ್ಯಕ್ತಿತ್ವ ವಿಕಸನವನ್ನು ಉತ್ತೇಜಿಸುವ ಚೈತನ್ಯಯುತವಾದ ಶೈಕ್ಷಣಿಕ ವಾತಾವರಣವನ್ನು ಕಾಪಾಡಿಕೊಂಡು ಬಂದಿದೆ ಎಂದರು.

ತನ್ನ 53 ವರ್ಷಗಳ ಪಯಣದಲ್ಲಿ ಕೆನರಾ ಕಾಲೇಜು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 135 ರ್ಯಾಂಕ್ ಗಳನ್ನು ಗಳಿಸಿ ನಿರಂತರವಾಗಿ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಿದೆ. ವಿಶೇಷವಾಗಿ 2023 -24 ಮತ್ತು 2024- 25ನೇ ಶೈಕ್ಷಣಿಕ ವರ್ಷಗಳಲ್ಲಿ ವಿಶ್ವವಿದ್ಯಾನಿಲಯ ಮಟ್ಟದ 12 ರ್ಯಾಂಕ್ ಗಳನ್ನು ಪಡೆದಿದ್ದು ಅದರ ಶಕ್ತಿಶಾಲಿ ಶೈಕ್ಷಣಿಕ ಸಾಧನೆಯನ್ನು ರುಜುವಾತು ಪಡಿಸಿದೆ.
ಬಿಸಿಎ(BCA) ಮತ್ತು ಎಂಸಿಎ(MCA) ವಿಭಾಗಗಳು ಸಂಸ್ಥೆಯ ಪ್ರಮುಖ ಶೈಕ್ಷಣಿಕ ಆಧಾರ ಸ್ಥಂಭಗಳಾಗಿದ್ದು ಗುಣಮಟ್ಟದ ಬೋಧನೆ, ಕೈಗಾರಿಕಾ ಆಧಾರಿತ ಪಠ್ಯಕ್ರಮ ಮತ್ತು ಕಂಪ್ಯೂಟರ್ ಅನ್ವಯಿಕ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಭದ್ರಬುನಾದಿಯಾಗಿದೆ.
ಸರಕಾರ, ಕಾರ್ಪೊರೇಟ್ ಸಂಸ್ಥೆಗಳು, ಶೈಕ್ಷಣಿಕ, ಉದ್ಯಮ ಹಾಗೂ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ದೇಶವಿದೇಶಗಳಲ್ಲಿ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿರುವ ಬಲಿಷ್ಠ ಹಾಗೂ ನೈಪುಣ್ಯತೆ ಹೊಂದಿದ ಹಳೆ ವಿದ್ಯಾರ್ಥಿ ಸಂಘವು ಈ ಕಾಲೇಜಿಗೆ ಕಿರೀಟ ಪ್ರಾಯವೆನಿಸಿದೆ ಎಂದು ವಾಸುದೇವ ಕಾಮತ್ ಅವರು ವಿವರ ನೀಡಿದರು.

ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಅವರು ಮಾತನಾಡಿ, ಶೈಕ್ಷಣಿಕ ವರ್ಷ2025 26ನೇ ಸಾಲಿನಲ್ಲಿ *ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ* (Autonomus status)ಬಂದಿರುವುದನ್ನು ಹೆಮ್ಮೆಯಿಂದ ಘೋಷಿಸುತ್ತೇವೆ. ಇದು ಕಾಲೇಜಿನ ಶೈಕ್ಷಣಿಕ ಪಯಣದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ. ಸ್ವಾಯತ್ತ ಸ್ಥಾನಮಾನದಿಂದ ಸಮಾಜ, ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೇಗವಾಗಿ ನಡೆಯುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸುವ, ಪರಿಷ್ಕರಿಸುವ ಅಧಿಕಾರವೂ ದೊರೆತಿರುವುದು. ಇದರ ಮೂಲಕ ಸಮಕಾಲಿನ ಕೌಶಲ್ಯ ಆಧಾರಿತ ಬಹುಶಾಖಾ ಮತ್ತು ವೃತ್ತಿ ಕೇಂದ್ರಿತ ಪಠ್ಯಕ್ರಮಗಳನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಮತ್ತು ಪ್ರಸ್ತುತ ಅವಶ್ಯಕತೆಗಳಿಗೆ ಯೋಗ್ಯವಾದ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದರು.

ಕೋಶಾಧಿಕಾರಿ ಸಿಎ ಎಂ ವಾಮನ್ ಕಾಮತ್ ಅವರು ಮಾತನಾಡಿ, ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಕೆಳಗಿನ ಕೈಗಾರಿಕಾ ಅವಶ್ಯಕತೆಗಳಿಗೆ ಹೊಂದಿಕೊಂಡ ಹೊಸ ಪಠ್ಯಕ್ರಮಗಳನ್ನು ಪ್ರಾರಂಭಿಸಲು ಕಾಲೇಜು ಪ್ರಸ್ತಾವನೆಗಳನ್ನು ಸಲ್ಲಿಸಿದೆ.
• ಲಾಜಿಸ್ಟಿಕ್ಸ್ನಲ್ಲಿ ಬಿಬಿಎ (BBA in Logistics)
• ಡೇಟಾ ಅನಾಲಿಟಿಕ್ಸ್ನಲ್ಲಿ ಬಿಸಿಎ (BCA in Data Analytics)
• ಬಿಸಿನೆಸ್ ಡೇಟಾ ಅನಾಲಿಟಿಕ್ಸ್ನಲ್ಲಿ ಬಿ.ಕಾಂ (B.Com in Business Data Analytics)
ಶಿಕ್ಷಣದಲ್ಲಿ ಮೇಲಿನ ಪಠ್ಯ ಕ್ರಮವನ್ನು ಪ್ರಸ್ತುತ ಮಾರುಕಟ್ಟೆ ಅಗತ್ಯಗಳಿಗೆ ಹೊಂದುವ ಉದ್ದೇಶದಿಂದ ಲಾಜಿಸ್ಟಿಕ್ಸ್ ನಿರ್ವಹಣೆ ಡೇಟಾ ಸೈನ್ಸ್ ಮತ್ತು ವ್ಯವಹಾರ ವಿಶ್ಲೇಷಣೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಸಿಎ ಎಂ ವಾಮನ್ ಕಾಮತ್ ತಿಳಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಸಂಚಾಲಕ ಹಾಗೂ ಅಸೋಸಿಯೇಷನ್ ಕೋಶಾಧಿಕಾರಿ ಸಿಎ ಜಗನ್ನಾಥ ಕಾಮತ್, ಕೆನರಾ ವಿಕಾಸ್ ಕಾಲೇಜಿನ ಕೋ- ಆರ್ಡಿನೇಟರ್ ಬಸ್ತಿ ಪುರುಷೋತ್ತಮ ಶೆಣೈ, ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಹಾಗೂ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.
__Sathish Kapikad

