ಮಂಗಳೂರು, ಫೆಬ್ರವರಿ, 03 : ಆರ್ ಎಸ್ ಎಸ್ ನ ಹಿರಿಯ ಕಾರ್ಯಕರ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ವಕ್ತಾರ ನಗರದ ರಥಬೀದಿ ನಿವಾಸಿ ಸತೀಶ್ ಪ್ರಭು ( ವಯಸ್ಸು 59 ) ಅವರು ಮಂಗಳವಾರ ಬೆಳಗ್ಗೆ ನಗರದ ಯೆ್ನೆಪೋಯ ಅಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ತಮ್ಮ ಮನೆಯಲ್ಲಿದ್ದ ಸಂದರ್ಭ ಇಂದು ಬೆಳಗ್ಗೆ ಏಕಾಏಕಿ ಕುಸಿದು ಬಿದ್ದ ಪ್ರಭು ಅವರನ್ನು ನಗರದ ಯೆ್ನೆಪೋಯ ಅಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಲಾಯಿತು. ಈ ವೇಳೆ ಇವರನ್ನು ಪರೀಕ್ಷಿಸಿದ ವೈದ್ಯರು ಪ್ರಭು ಅವರಿಗೆ ಬ್ರೈನ್ ಹೇಮರೆಜ್ ಆಗಿರುವುದಾಗಿ ತಿಳಿಸಿದ್ದು, ಇದೇ ಸಂದರ್ಭದಲ್ಲಿ ಅವರು ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಮೃತರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ಬಾಲ್ಯದಿಂದಲೇ ಸಂಘದ ಸ್ವಯಂಸೇವಕರಾಗಿದ್ದ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಹಿರಿಯ ಕಾರ್ಯಕರ್ತರಾಗಿ ವಿವಿಧ ಜವಾಬ್ಧಾರಿಗಳನ್ನು ವಹಿಸಿಕೊಳ್ಳುವ ಮೂಲಕ ಸಂಘಕ್ಕೆ ನಿಷ್ಟಾವಂತರಾಗಿ ಅಪಾರ ಸೇವೆ ಸಲ್ಲಿಸಿದ್ದರು. ನಗರದ ಕಾರ್ಸ್ಟ್ರೀಟ್ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿದ್ದರು. ಮಾತ್ರವಲ್ಲದೇ ನಗರದ ಮಣ್ಣಗುಡ್ಡೆ ಸಮೀಪವಿರುವ ಸಂಘನಿಕೇತನದ ಕೇಶವ ಸಂವರ್ಧನ ಸಮಿತಿಯ ಉಪಾಧ್ಯಕ್ಷಕರಾಗಿದ್ದು, ಸಂಘನಿಕೇತನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿದ್ದು ಕೂಡ ಸೇವಾ ಚಟುವಟಿಕೆಯಲ್ಲಿ ತೊಡಗಿದ್ದರು.
ಕದ್ರೊಳಿ ಸಮೀಪ ಸಣ್ಣ ಮುದ್ರಣ ಸಂಸ್ಥೆ ಆರಂಭಿಸಿ ತಮ್ಮ ಉದ್ಯೋಗದಲ್ಲಿ ತೃಪ್ತಿಪಟ್ಟುಕೊಂಡಿದ್ದ ಪ್ರಭು ಅವರು, ಆರ್ ಎಸ್ ಎಸ್ ಹಾಗೂ ಬಿಜೆಪಿಯಲ್ಲಿ ಪ್ರಬಲ ಮುಖಂಡರ ಸಂಪರ್ಕ ಇದ್ದರೂ, ತುಂಬಾ ಸರಳವಾಗಿಯೇ ಬದುಕು ನಡೆಸುತಿದ್ದರು.
ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರೀಯರಾಗಿದ್ದು ಕೊಂಡು ಹಲವಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರೂ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಅಸಮಧಾನಗೊಂಡು ಹಿಂದಿನ ಬಾರಿಯ ಚುನಾವಣೆ ಸಂದರ್ಭ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಆದರೆ ಅಲ್ಲಿಯೂ ಕೂಡ ತಮಗೆ ಒಗ್ಗಿಕೊಳ್ಳಲ್ಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಅದ್ಧೂರಿ ಸಮಾರಂಭವೊಂದರಲ್ಲಿ ಮತ್ತೆ ಮರಳಿ ತಮ್ಮ ಮಾತೃ ಪಕ್ಷಕ್ಕೆ ಸೇರ್ಪಡೆಗೊಂದಿದ್ದರು.. ಇದೀಗ ಸತೀಸ್ ಪ್ರಭು ಅವರು ಸ್ವಯಂಸೇವಕ ಸಂಘದ ಹಾಗೂ ಬಿಜೆಪಿಯಲ್ಲಿನ ತಮ್ಮ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

2024 ಮಾರ್ಚ್ ನಲ್ಲಿ ಬಿಜೆಪಿ ದಕ್ಷಿಣ ಮಂಡಲ ವತಿಯಿಂದ ನಗರದ ಟಿ ವಿ ರಮಣ ಪೈ ಸಭಾಂಗಣದಲ್ಲಿ ನಡೆದ ಶಕ್ತಿಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಮರಳಿ ಮಾತೃ ಪಕ್ಷ ಸೇರಿದ್ದ ಸತೀಶ್ ಪ್ರಭು
__Sathish Kapikad

