
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಪರಿಸರದ ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿ, ಐತಿಹಾಸಿಕ ದೃಶ್ಯಾವಳಿಗಳ ಮತ್ತು ಆಕರ್ಷಣೀಯ ಹಚ್ಚ ಹಸಿರಿನ ವನಸಿರಿಯ ಮಧ್ಯೆ ಇರುವ ಪವಿತ್ರ ದೇವಾಲಯವೇ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯವಾಗಿದೆ. ಇದು ಮಂಗಳೂರಿನಿಂದ ಸುಮಾರು 26 ಕಿ.ಮೀ ದೂರದಲ್ಲಿದೆ ಮತ್ತು ಹಿಂದೂ ಧರ್ಮದ ಪವಿತ್ರ ದೇವಾಲಯಗಳಲ್ಲೊಂದಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆಯಲು ಪ್ರತಿನಿತ್ಯ ಸಹಸ್ರಾರು ಭಕ್ತಾದಿಗಳು ಕಟೀಲು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.
ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವವ ಹಾಗೂ ಲಕ್ಷದೀಪೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಉತ್ಸವದ ಭಾಗವಾಗಿ ‘ಲಲಿತ ಪಂಚಮಿ’, ‘ಮಹಾನವಮಿ’,’ವಿಜಯದಶಮಿ’ ಹಾಗೂ ‘ಮಧ್ವ ಜಯಂತಿ’ಯನ್ನು ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಬಹುಲಾ ಪಂಚಮಿ ದಿನದಂದು ದೀಪಗಳ ಹಬ್ಬ ಲಕ್ಷದೀಪೋತ್ಸವವನ್ನು ಆಚರಿಸಲಾಗುತ್ತದೆ.

ಶ್ರೀ ಕ್ಷೇತ್ರದಲ್ಲಿ ಏಪ್ರಿಲ್ ತಿಂಗಳಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವನ್ನು 8 ದಿನಗಳವರೆಗೆ ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಅಚರಿಸಲಾಗುತ್ತದೆ. ಮೊದಲ ದಿನ ಕೋಡಿ ಧ್ವಜವನ್ನು ಏರಿಸಲಾಗುತ್ತದೆ. ಮೂರನೇ ದಿನ ದೇವರ ಮೂಡು ಸವಾರಿ (ಮೂಡಣದ ದಿಕ್ಕಿಗೆ) ನಡೆಯುತ್ತದೆ. ಐದನೇ ದಿನ ರಥಬೀದಿಯಲ್ಲಿ ಬೆಳ್ಳಿ ರಥೋತ್ಸವ ನಡೆಯುತ್ತದೆ. ಆರನೇ ದಿನ ಪಡು ಸವಾರಿ ( ಪಡುವಣದ ದಿಕ್ಕಿಗೆ) ನಡೆಯುತ್ತದೆ. ಏಳನೇ ದಿನ ಬ್ರಹ್ಮರಥೋತ್ಸವ ನಡೆಯುತ್ತದೆ. ಉತ್ಸವದ ಎಲ್ಲಾ ದಿನಗಳಲ್ಲಿ ಚಿನ್ನದ ರಥೋತ್ಸವ ನಡೆಯುತ್ತದೆ. ಕೊನೆಯ ದಿನ ದೇವರ ಕಟೀಲು ಊರ ಸವಾರಿ ನಡೆಯುತ್ತದೆ. ಮರಳಿ ರಥಬೀದಿಗೆ ಬರುವಾಗ ಮಧ್ಯರಾತ್ರಿ ಸುಮಾರು 2 ಘಂಟೆ ಆಗುತ್ತದೆ. ಅದೇ ಸಮಯಕ್ಕೆ ಶಿಬರೂರಿನ ಕೊಡಮಣಿತ್ತಾಯ ದೈವದ ಪ್ರವೇಶವೂ ಆಗಿರುತ್ತದೆ. ಮುಂದೆ ಅಲ್ಲಿ ಅವಭೃಥೋತ್ಸವ (ರಥೋತ್ಸವ) ನಡೆಯುತ್ತದೆ. ಬಳಿಕ ದೇವರು ಜಳಕಕ್ಕೆ ಹೋಗಿ ಅಲ್ಲಿಂದ ಮರಳಿ ಬರುವಾಗ ತೂತಾಟ (ಬೆಂಕಿಯ ಆಟ) ಶುರುವಾಗುತ್ತದೆ. ( ಬೆಂಕಿಯ ಆಟಕ್ಕೆ ಕೊಡೆತ್ತೂರು ಮತ್ತು ಅತ್ತೂರು ಗ್ರಾಮದ ಜನತೆಯ ನಡುವೆ ನಡೆದ ಜಗಳದ ಬೇರೆಯೇ ಇತಿಹಾಸ ಇದೆ ಎನ್ನಲಾಗಿದೆ)

ಶ್ರೀ ಕ್ಷೇತ್ರದಲ್ಲಿ ಪ್ರತೀ ದಿನವೂ ಭಕ್ತರಿಗೆ ಎರಡು ಬಾರಿ ಅನ್ನ ಪ್ರಸಾದ ನೀಡಲಾಗುತ್ತದೆ. ಒಂದೇ ಸಮಯದಲ್ಲಿ ಸುಮಾರು ಒಂದು ಸಾವಿರ ಜನರಿಗೆ ಅವಕಾಶ ಕಲ್ಪಿಸಲು ವಿಸ್ತಾರವಾದ ಭೋಜನಶಾಲೆಯನ್ನು ನಿರ್ಮಿಸಲಾಗಿದೆ. ಇಲ್ಲಿ ವಾರ್ಷಿಕವಾಗಿ ಸುಮಾರು ಹತ್ತು ಲಕ್ಷ ಭಕ್ತರು ಅನ್ನಪ್ರಸಾದವನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ. ಅನ್ನದಾನ ಮತ್ತು ಮಹಾ ಅನ್ನದಾನಾ ಎಂಬ ಎರಡು ಪ್ರತ್ಯೇಕ ಸೇವೆಗಳು ಇಲ್ಲಿ ಲಭ್ಯವಿದೆ. ಇದರ ಮೂಲಕ ಭಕ್ತರು ಅನ್ನದಾನ ಸೇವೆಯಲ್ಲಿ ಪೋಷಕರಾಗಿ ಭಾಗವಹಿಸಬಹುದು.
ಶ್ರೀ ಕ್ಷೇತ್ರದ ವತಿಯಿಂದ ಐದು ಶಿಕ್ಷಣ ಸಂಸ್ಥೆಗಳನ್ನು ನಡೆಸಿ ಕೊಡು ಬರುತ್ತದೆ. ಹಿರಿಯ ಪ್ರಾಥಮಿಕ ಪ್ರೌಢಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ. ಈ ದೇವಾಲಯವು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮಧ್ಯಾಹ್ನ ಊಟವನ್ನು ನೀಡುತ್ತದೆ, ಆದರೆ ಇದಕ್ಕೆ ಪ್ರತಿಯಾಗಿ ಏನನ್ನೂ ತೆಗೆದುಕೊಳ್ಳುವುದಿಲ್ಲ. ಜೊತೆಗೆ ಆಸಕ್ತರಿಗೆ ಯಕ್ಷಗಾನವನ್ನು ಕಲಿಯುವ ಅವಕಾಶವೂ ಇದೆ. ಹಬ್ಬದ ದಿನಗಳಲ್ಲಿ ಈ ವಿದ್ಯಾರ್ಥಿಗಳು ಯಕ್ಷಗಾನವನ್ನು ನಡೆಸುತ್ತಾರೆ. ಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರದ ಅನುದಾನವನ್ನು ಪಡೆದುಕೊಳ್ಳದೆ, ಈ ಕಾಲೇಜು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಪ್ರಯೋಜನವನ್ನು ವಿಸ್ತರಿಸಲು ಸಹಕರಿಸುತ್ತಿದೆ. ವಿದ್ಯಾರ್ಥಿಗಳು ಯುನಿವರ್ಸಿಟಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನುಗಳಿಸುತ್ತಿರುವುದು, ಇವರ ಈ ಯೋಜನೆಯ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.
ಕಟೀಲೇಶ್ವರಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದೇವಾಲಯದ ಪ್ರಧಾನ ದೇವತೆಯಾದ ಶ್ರೀ ದೇವಿಯು ಸಂಗೀತ ಮತ್ತು ನೃತ್ಯದಂತಹ ಲಲಿತಕಲೆಗಳಲ್ಲಿ ಬಹಳ ಆಸಕ್ತಿ ಹೊಂದಿದವಳು. ಅದರಲ್ಲೂ ಯಕ್ಷಗನ ತಾಯಿಯ ಅಚ್ಚುಮೆಚ್ಚಿನದಾಗಿದೆ. ಈ ಹಿನ್ನೆಲೆಯಲ್ಲಿ ಆರಂಭಗೊಂಡ ಕಟೀಲು ಮೇಳ ಎಂದೇ ಜನಪ್ರಿಯವಾಗಿರುವ ಶ್ರೀ ಕಟೀಲು ಯಕ್ಷಗಾನ ಮೇಳ ಒಂದು ಪ್ರಸಿದ್ಧ ಯಕ್ಷಗಾನ ತಂಡವಾಗಿದೆ. ಈ ಯಕ್ಷಗಾನ ತಂಡವು ಒಂದು ಪ್ರಮುಖ ‘ಹರಕೆ ಸೇವಾ’ ತಂಡವಾಗಿದೆ. ಒಂದು ಸೇವೆಯಾಗಿ ಯಕ್ಷಗಾನದ ಪ್ರದರ್ಶನವನ್ನು, ಪ್ರತಿಜ್ಞೆ (ಹರಕೆ) ಮಾಡುವ ಭಕ್ತರ ಕೋರಿಕೆಯ ಮೇರೆಗೆ ಏರ್ಪಡಿಸಲಾಗುತ್ತದೆ.


