
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 16ರಂದು ಮುದ್ದು ಶಾರದೆ ಸ್ಫರ್ಧೆ ಜರುಗಲಿದೆ.
ಪ್ರತಿಯೊಬ್ಬ ತಾಯಿಗೂ ತನ್ನ ಮಗಳು ಬರೀ ಮಗಳಲ್ಲ, ಆಕೆಯ ಎದೆಯ ಬಡಿತ, ಉಸಿರಿನ ನಿನಾದ, ಬದುಕಿನ ಅತ್ಯಂತ ದೊಡ್ಡ ವಿಸ್ಮಯ.
ಆದರೆ ಅದೇ ಮುದ್ದು ಕಂದಮ್ಮ ಹಣೆಗೆ ತಿಲಕವನ್ನಿಟ್ಟು, ಕೈಯಲ್ಲಿ ಪುಟ್ಟ ವೀಣೆ ಹಿಡಿದು, ಜಗನ್ಮಾತೆ ಶಾರದೆಯಾಗಿ ಮುಗುಳ್ನಕ್ಕು ನಿಂತಾಗ… ಆ ಕ್ಷಣ ಎದೆಯಾಳದಲ್ಲಿ ಅಣೆಕಟ್ಟು ಒಡೆದಂತೆ ಉಕ್ಕಿ ಹರಿಯುವ ವಾತ್ಸಲ್ಯದ ಪ್ರವಾಹವನ್ನು ಯಾವ ಪದಗಳೂ ವರ್ಣಿಸಲಾರವು.
ಕರಾವಳಿಯ ಕಣ್ಮಣಿ, ಭಕ್ತಿ-ಭಾವಗಳ ಪಾವನ ನೆಲೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಡಿಲಿನಲ್ಲಿ, ಮಂಗಳೂರು ದಸರಾದ ಪುಣ್ಯ ಸಂಭ್ರಮದ ನಡುವೆ 2026ರ ಅಕ್ಟೋಬರ್ 16 ರಂದು ಅಂತಹದ್ದೇ ಒಂದು ಕಣ್ಣು ತೇವವಾಗಿಸುವ ಅಪೂರ್ವ ಘಳಿಗೆ ಜರುಗಲಿದೆ.
ಅಂದು ನಡೆಯಲಿರುವ ‘ಮುದ್ದು ಶಾರದೆ’ ಎಂಬುದು ಕೇವಲ ಒಂದು ಸ್ಪರ್ಧೆಯಲ್ಲ, ಅದು ಸಾವಿರಾರು ಹೆತ್ತವರ ನಿಸ್ವಾರ್ಥ ಕನಸುಗಳು, ಭಕ್ತಿ ಮತ್ತು ಮಮಕಾರದ ದೈವೀ ಸಂಗಮವಾಗಿದೆ.
ತಲೆಯ ಮೇಲೊಂದು ಪುಟ್ಟ ಕಿರೀಟ, ಮೈತುಂಬಾ ಒಪ್ಪುವ ಸೀರೆ-ಒಡವೆಗಳು, ಮುಗ್ಧ ನಗುವಿನ ನಡುವೆ ಮಿಂಚುವ ಆ ನಿಷ್ಕಲ್ಮಶ ಕಣ್ಣುಗಳು… ವೇದಿಕೆಯ ಮೇಲೆ ಪುಟ್ಟ ಹೆಜ್ಜೆಗಳನ್ನಿಟ್ಟು ಬರುವ ಆ ಪುಟ್ಟ ಶಾರದೆಯರನ್ನು ನೋಡುವಾಗ, ಸಾಕ್ಷಾತ್ ವಿದ್ಯಾದೇವತೆಯೇ ತನ್ನ ಮುಗ್ಧ ರೂಪದಲ್ಲಿ ಭುವಿಗಿಳಿದು ನಡೆದು ಬಂದಂತೆ ಭಾಸವಾಗುತ್ತದೆ.
ತಮ್ಮ ಕರುಳಿನ ಕುಡಿಯಲ್ಲೇ ಆ ಜಗನ್ಮಾತೆಯ ದೈವೀ ತೇಜಸ್ಸನ್ನು ಕಂಡು ಕೈಮುಗಿದು ನಿಲ್ಲುವ ಅಮ್ಮ-ಅಪ್ಪಂದಿರ ಕಣ್ಣೀರ ಹನಿಯಲ್ಲಿ, ಇಡೀ ಆವರಣವೇ ಭಕ್ತಿಯ ಅಲೆಯಲ್ಲಿ ಮಿಂದೇಳುತ್ತದೆ.
ಮುಗ್ಧತೆಯೇ ಪೂಜೆಯಾಗಿ, ವಾತ್ಸಲ್ಯವೇ ನೈವೇದ್ಯವಾಗುವ ಆ ಪಾವನ ದಿನ. ಅಕ್ಟೋಬರ್ 16, ಪ್ರತಿಯೊಬ್ಬರ ಹೃದಯದಲ್ಲೂ ಭಕ್ತಿಯ ಬೆಳಕನ್ನೂ, ಕಣ್ಣಂಚಿನಲ್ಲಿ ಪ್ರೀತಿಯ ಹನಿಯನ್ನೂ ಉಳಿಸುವ ಒಂದು ಅವಿಸ್ಮರಣೀಯ ಭಾವಲೋಕವನ್ನೇ ಸೃಷ್ಟಿಸಲಿದೆ.
_Sathish Kapikad


