ಮಂಗಳೂರು, ಜುಲೈ 14, 2026 : ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಅನಾಲಿಸಿಸ್ (CERA) ಹಾಗೂ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ (SIO) ಇವರ ಸಹಯೋಗದಲ್ಲಿ ಇಂದು (ಬುಧವಾರ) ಮಂಗಳೂರಿನಲ್ಲಿ ಕರಾವಳಿ ಕರ್ನಾಟಕ ಇತಿಹಾಸ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.

ಕರಾವಳಿ ಕರ್ನಾಟಕದ ಸಮೃದ್ಧ ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ಪರಂಪರೆಯ ಕುರಿತು ಚರ್ಚಿಸಲು ಇತಿಹಾಸಕಾರರು, ಸಂಶೋಧಕರು, ಶಿಕ್ಷಣ ತಜ್ಞರು, ಪತ್ರಕರ್ತರು ಹಾಗೂ ಸಮಾಜಮುಖಿ ಚಿಂತಕರು ಒಂದೇ ವೇದಿಕೆಯಲ್ಲಿ ಸೇರಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಶಾಂತಿ ಪ್ರಕಾಶನದ ವ್ಯವಸ್ಥಾಪಕರು ಜನಾಬ್ ಮೊಹಮ್ಮದ್ ಕುಂಞಿಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸನ್ಮಾರ್ಗ ಮೀಡಿಯಾ ಉಪಸಂಪಾದಕರಾದ ಶ್ರೀ ದಾನಿಶ್ ಚೆಂಡಾಡಿ ಹಾಗೂ ಎಸ್‌ಐಒ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಶ್ರೀ ಹಯ್ಯಾನ್ ಉಪಸ್ಥಿತರಿದ್ದರು. ತಮ್ಮ ಭಾಷಣಗಳಲ್ಲಿ ಅವರು ಜನರ ಇತಿಹಾಸವನ್ನು ದಾಖಲಿಸುವ ಅಗತ್ಯತೆ, ಪ್ರಾದೇಶಿಕ ಪರಂಪರೆಯ ಸಂರಕ್ಷಣೆ, ಶೈಕ್ಷಣಿಕ ಸಂಶೋಧನೆಗೆ ಉತ್ತೇಜನ ಹಾಗೂ ಇತಿಹಾಸವನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವ ಮಹತ್ವವನ್ನು ಒತ್ತಿ ಹೇಳಿದರು.

ಗೌರವ ಅತಿಥಿಯಾಗಿ ಖ್ಯಾತ ಪರಿಸರ ಮತ್ತು ಸಾಮಾಜಿಕ ಹೋರಾಟಗಾರ್ತಿಯಾದ ಶ್ರೀಮತಿ ವಿದ್ಯಾ ಡಿಂಕರ್ ಭಾಗವಹಿಸಿ, ರಾಣಿ ಅಬ್ಬಕ್ಕ ಅವರ ಐತಿಹಾಸಿಕ ಕೊಡುಗೆ, ಕರಾವಳಿ ಕರ್ನಾಟಕದ ಪ್ರತಿರೋಧದ ಇತಿಹಾಸ ಹಾಗೂ ಸ್ಥಳೀಯ ಇತಿಹಾಸವನ್ನು ಸಂಶೋಧನಾ ದೃಷ್ಟಿಯಿಂದ ದಾಖಲಿಸುವ ಅಗತ್ಯತೆ ಕುರಿತು ವಿವರವಾಗಿ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷೀಯ ಭಾಷಣವನ್ನು ಸಿಇಆರ್‌ಎ ಚೇರ್ಮನ್ ಶ್ರೀ ಆದಿ ಅಲ್ ಹಸನ್ ಅವರು ಮಾಡಿದರು. ಸಾಕ್ಷ್ಯಾಧಾರಿತ ಇತಿಹಾಸ ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಕರಾವಳಿ ಕರ್ನಾಟಕದ ವೈವಿಧ್ಯಮಯ ಪರಂಪರೆಯನ್ನು ಸಂರಕ್ಷಿಸುವುದು ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧಕರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನದ ವಿವಿಧ ಶೈಕ್ಷಣಿಕ ಅಧಿವೇಶನಗಳಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರ ಪೂಜಾರಿ, ಹಿರಿಯ ಪತ್ರಕರ್ತ ಶ್ರೀ ನವೀನ್ ಸೂರಿಂಜೆ, ಕಾರ್ಕಳ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಮಹಮ್ಮದ್ ರಿಯಾಝ್ ಕಾರ್ಕಳ, ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕರಾದ ಶ್ರೀ ರಾಮಾಂಜಿ ನಮ್ಮ ಭೂಮಿ ಹಾಗೂ MANUSHA ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರೊ. ಜುಬೈರ್ ಅಧ್ಯಕ್ಷತೆ ವಹಿಸಿದ್ದರು.

ಕರಾವಳಿ ಕರ್ನಾಟಕದ ಇತಿಹಾಸದ ವಿವಿಧ ಆಯಾಮಗಳನ್ನು ಒಳಗೊಂಡ ಐದು ವಿಷಯಾಧಾರಿತ ಕ್ಷೇತ್ರಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.

ಅವುಗಳೆಂದರೆ ಕರಾವಳಿ ಕರ್ನಾಟಕದ ವ್ಯಾಪಾರ ಮತ್ತು ಆರ್ಥಿಕತೆ, ಸಾಮಾಜಿಕ ರಚನೆ ಮತ್ತು ಸಾಂಸ್ಕೃತಿಕ ಸಮನ್ವಯ, ಭಾಷಿಕ ಸಮುದಾಯಗಳ ರೂಪುಗೊಳ್ಳುವಿಕೆ: ಅವುಗಳ ಇತಿಹಾಸ ಮತ್ತು ಮೂಲ, ವಿವಿಧ ಆಡಳಿತಗಾರರು ಹಾಗೂ ಅವರ ಆಡಳಿತ ಮತ್ತು ಸಾಮಾಜಿಕ ಪರಿಣಾಮ, ಮತ್ತು ಕರಾವಳಿ ಕರ್ನಾಟಕದ ಸಮಾಜ ಸುಧಾರಕರು. ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಶೋಧಕರು ಮತ್ತು ವಿದ್ವಾಂಸರು ತಮ್ಮ ಮೂಲ ಅಧ್ಯಯನಗಳನ್ನು ಮಂಡಿಸಿ, ಚೈತನ್ಯಮಯ ಶೈಕ್ಷಣಿಕ ಚರ್ಚೆಗಳಿಗೆ ಕಾರಣರಾದರು. ಈ ಸಂವಾದಗಳು ಕರಾವಳಿ ಕರ್ನಾಟಕದ ಐತಿಹಾಸಿಕ ಬೆಳವಣಿಗೆಯ ಕುರಿತು ಹೊಸ ಒಳನೋಟಗಳನ್ನು ನೀಡುವುದರ ಜೊತೆಗೆ, ಬಹುಶಿಸ್ತೀಯ ಅಧ್ಯಯನಕ್ಕೆ ಉತ್ತೇಜನ ನೀಡಿದವು.

ಸಮ್ಮೇಳನವು ಕರಾವಳಿ ಕರ್ನಾಟಕದ ಬಹುತ್ವದ ಪರಂಪರೆ, ಕಡಲಾಧಾರಿತ ಇತಿಹಾಸ, ಬೌದ್ಧಿಕ ಕೊಡುಗೆಗಳು ಹಾಗೂ ವಿವಿಧ ಸಮುದಾಯಗಳು ಈ ಪ್ರದೇಶದ ಗುರುತಿನ ನಿರ್ಮಾಣದಲ್ಲಿ ವಹಿಸಿರುವ ಪಾತ್ರಗಳ ಕುರಿತು ನಿರಂತರ ಸಂಶೋಧನೆ ನಡೆಯಬೇಕಾದ ಅಗತ್ಯವನ್ನು ಪುನರುಚ್ಚರಿಸಿತು.

ಈ ಸಮ್ಮೇಳನವು ಮುಂದಿನ ದಿನಗಳಲ್ಲಿ ಕರಾವಳಿ ಕರ್ನಾಟಕದ ಇತಿಹಾಸದ ಕುರಿತು ದಾಖಲಾತಿ, ಪ್ರಕಟಣೆ ಹಾಗೂ ಶೈಕ್ಷಣಿಕ ಸಹಯೋಗಗಳಿಗೆ ಹೊಸ ಪ್ರೇರಣೆ ನೀಡಲಿದೆ ಎಂಬ ವಿಶ್ವಾಸವನ್ನು ಭಾಗವಹಿಸಿದವರು ವ್ಯಕ್ತಪಡಿಸಿದರು.

_Sathish Kapikad

Share.
Leave A Reply

Exit mobile version