ಮಂಗಳೂರು, ಜೂನ್ 22: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ, ಮಂಗಳೂರು ವಿಶ್ವಶಾಂತಿ ಮಂದಿರದಲ್ಲಿ ಭಾನುವಾರ ಬೆಳಿಗ್ಗೆ ಯೋಗಾಭ್ಯಾಸ ಹಾಗೂ ರಾಜಯೋಗ ಧ್ಯಾನದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಯೋಗಗುರು ಶ್ರೀ ಮಂಜುನಾಥ್ ಹಾಗೂ ಶ್ರೀ ರೋಹಿತ್ ಅವರು ವಿವಿಧ ಯೋಗಾಸನಗಳು, ಸೂರ್ಯ ನಮಸ್ಕಾರ ಮತ್ತು ಪ್ರಾಣಾಯಾಮಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ನಡೆಸಿಕೊಟ್ಟರು.

ನಿಯಮಿತ ಯೋಗಾಭ್ಯಾಸವು ದೈಹಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮಾನಸಿಕ ಒತ್ತಡವನ್ನು ನಿವಾರಿಸಿ ಜೀವನದಲ್ಲಿ ಉತ್ಸಾಹ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದರು.

ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರು ತಮ್ಮ ಆಧ್ಯಾತ್ಮಿಕ ಸಂದೇಶದಲ್ಲಿ, “ಯೋಗವು ಕೇವಲ ದೇಹದ ವ್ಯಾಯಾಮವಲ್ಲ. ರಾಜಯೋಗ ಧ್ಯಾನದ ಮೂಲಕ ಆತ್ಮವು ಪರಮಾತ್ಮನೊಂದಿಗೆ ಸಂಬಂಧ ಬೆಳೆಸಿದಾಗ ಮನಸ್ಸಿಗೆ ಶಾಂತಿ, ಆತ್ಮಬಲ ಮತ್ತು ಸಂತೋಷ ದೊರೆಯುತ್ತದೆ. ಯೋಗಾಸನ ಮತ್ತು ರಾಜಯೋಗದ ಸಮನ್ವಯದಿಂದ ದೇಹ, ಮನಸ್ಸು ಮತ್ತು ಆತ್ಮದ ಸಮಗ್ರ ಆರೋಗ್ಯವನ್ನು ಸಾಧಿಸಬಹುದು. ಇಂದಿನ ವೇಗದ ಜೀವನದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಸ್ವಲ್ಪ ಸಮಯ ಯೋಗ ಮತ್ತು ಧ್ಯಾನಕ್ಕೆ ಮೀಸಲಿಡಬೇಕು” ಎಂದು ಕರೆ ನೀಡಿದರು.

ಬಳಿಕ ಎಲ್ಲರಿಗೂ ರಾಜಯೋಗ ಧ್ಯಾನದ ಅನುಭವವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರೀಸ್ ಸದಸ್ಯರು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗ ಮತ್ತು ಆಧ್ಯಾತ್ಮಿಕತೆಯ ಮಹತ್ವವನ್ನು ಸಾರಿದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

_Sathish Kapikad 

Share.
Leave A Reply

Exit mobile version