
ಉಳ್ಳಾಲ: ಉಳ್ಳಾಲ ತಾಲ್ಲೂಕಿನ ಪ್ರಥಮ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಚರಣ್ ರಾಜ್ ಕೆ. ಶೆಟ್ಟಿ ಹಾಗೂ ಪ್ರಕೃತಿ ಸಿ. ಶೆಟ್ಟಿ ದಂಪತಿಗೆ ಗುರುವಾರ ನಡೆದ ಸಮಾರಂಭದಲ್ಲಿ “ಅಬ್ಬಕ್ಕ ಸಾಧನಾ ಪ್ರಶಸ್ತಿ” ಪ್ರದಾನಿಸಲಾಯಿತು.
ಈ ವೇಳೆ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ “ನಾನು ಒಂದು ಸಲ ವಿಮಾನ ಪ್ರಯಾಣಿಸುವ ಸಂದರ್ಭ ಅಲ್ಲಿನ ಸಿಬ್ಬಂದಿಗಳು ನನ್ನನ್ನು ಗುರುತಿಸಿ ಎಲ್ಲರಿಗೂ ಪರಿಚಯಿಸಿದ ಕ್ಷಣ ಮತ್ತು ದೊರೆತ ಚಪ್ಪಾಳೆಗಳು ನನ್ನ ಜೀವನದ ಅತ್ಯಂತ ಸಂತಸದ ಕ್ಷಣಗಳಾಗಿವೆ. ಜೀವನದಲ್ಲಿ ಸಾಧನೆ ಮಾಡಿದ ಇಬ್ಬರು ಪೈಲಟ್ ಗಳನ್ನು ಸನ್ಮಾನಿಸಲ್ಪಟ್ಟಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ” ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಕೃತಿ ಸಿ. ಶೆಟ್ಟಿ ಮಾತನಾಡಿ, “ಆರಂಭದಲ್ಲಿ ವಿಮಾನ ಹಾರಾಟದ ವೇಳೆ ನನಗೆ ಯಾವುದೇ ಭಯ ಅನ್ನಿಸಲಿಲ್ಲ . ಜೀವನದಲ್ಲಿ ಶ್ರದ್ಧೆ ಇದ್ದರೆ ಏನನ್ನೂ ಸಾಧಿಸಬಹುದು.ಯುಎಇಯಲ್ಲಿ ನನ್ನ ಎಲ್ಲ ಶಿಕ್ಷಣವನ್ನು ಮುಗಿಸಿದ್ದೇನೆ. 6000 ಗಂಟೆಗಳ ಹಾರಾಟದ ಅನುಭವ ನನ್ನ ಜೀವನದ ದೊಡ್ಡ ಸಾಧನೆ. ನನ್ನ ತಂದೆ-ತಾಯಿಯ ಪ್ರೇರಣೆಯೇ ಇಂದು ನನ್ನನ್ನು ಈ ಮಟ್ಟಕ್ಕೆ ತಲುಪಿಸಿದೆ” ಎಂದು ಹೇಳಿದರು.
ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷ ರವಿ ಉಚ್ಚಿಲ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪ ರಾಜ್ ಬಿ.ಎನ್., ನಿವೃತ್ತ ಶಿಕ್ಷಕಿ ಪಾವನ , ಉದ್ಯಮಿ ಹರಿದಾಸ್ ಮಾಡೂರು , ಭುವನಾ ಶಶಿಧರ್ , ಭರತ್ ರಾಜ್ ಸನಿಲ್, ಶಶಿಧರ್ ಪೊಯ್ಯತ್ತಬೈಲ್ , ವಜ್ರ ಗುಜರನ್ ಹಾಗೂ ಗಣೇಶ್ ತಲಪಾಡಿ ಉಪಸ್ಥಿತರಿದ್ದರು.
_Sathish Kapikad

