ಹೆಸರು “ಪ್ರಶಾಂತ”ವಾಗಿದ್ದಾಗ ಬದುಕು ಅಶುಭವಾಗಿತ್ತು. “ರಿಷಭ”ನಾದ ಮೇಲೆ ಶುಭವು ತಾನಾಗಿ ಕದ ಬಡಿದು ಕೈ ಹಿಡಿಯಿತು. ಜೀವನದ ದಾರಿಯಲ್ಲೀಗ “ಪ್ರಗತಿ”…! ಆತನ ಜೀವದಡದ ತುಂಬೆಲ್ಲ ಅದೆಷ್ಟು ಅವಮಾನದ ಅಲೆಗಳು, ಅವುಗಳೆಲ್ಲ ಸುಖದ ಕುರುಹುಗಳಾಗಿರಲಿಲ್ಲ. ಜ್ವಾಲಾಮುಖಿಯಿಂದ ನೊರೆಗೆರೆದು ಕುದಿವ ಸೋತ ನೀರಿನ ಹನಿಗಳ ಉಂಡೆಯಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿ ರಿಷಬ್ ಬುದ್ಧಿವಂತ ಹುಡುಗನಾಗಿರಲಿಲ್ಲ. ಹುಡುಗಾಟದ ಮನಸ್ಸಿಗೆ ಉತ್ತೀರ್ಣನಾಗುವಷ್ಟು ಅಂಕ ದೊರೆತರೆ ಸಾಕೆನ್ನುವ ನಿರ್ಲಿಪ್ತ ಭಾವ. ಬದುಕು ಆತನನ್ನು ಹೇಗೇಗೋ ನಡೆಸಿಕೊಂಡಿತು. ಕುಟುಂಬದ ನೊಗ ಹೊರಲು ನೀರಿನ ಕ್ಯಾನು ಹೊತ್ತರು. ಜೀವನಕ್ಕಂಟಿದ ಆರ್ಥಿಕ ಕೊಳೆಯನ್ನು ತೊಳೆಯಲು ಹೋಟೆಲಿನ ಮೋರಿಯಲ್ಲಿ ನಿಂತು ಪಾತ್ರೆಯನ್ನು ತೊಳೆದರು. ಟೇಬಲನ್ನೂ ಒರೆಸಿದರು. ಸಿನಿಮಾ ಸೆಟ್ ನಲ್ಲಿ ಕಾರ್ಮಿಕರಾಗಿ ದುಡಿದರು. ಅವತ್ತಿನ ದಿನಗೂಲಿ ಹುಡುಗ ಇವತ್ತಿಗೆ ಜಗಮೆಚ್ಚಿದ ಹೀರೋ.


